ವಿಶಿಷ್ಟ ಅಭಿಮಾನಿಯ ಪಾದ ಮುಟ್ಟಿದ ಸೂಪರ್‌ ಸ್ಟಾರ್‌ ರಜನಿಕಾಂತ್‌

ಚೆನ್ನೈ: ಜಾಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್‌ ಅವರು ತಮ್ಮ ಸರಳ ವ್ಯಕ್ತಿತ್ವಕ್ಕೆ ಹೆಸರುವಾಸಿ. ರಜನಿ ದರ್ಶನವಾದರೆ ಸಾಕು, ತಮ್ಮ ಜೀವನ ಧನ್ಯ ಎಂಬ ಮನೋಭಾವ ಅವರ ಅಭಿಮಾನಿಗಳದ್ದು. ರಜನಿಕಾಂತ್ ಇತ್ತೀಚೆಗಷ್ಟೆ ವಿಶೇಷಚೇತನ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅಭಿಮಾನಿ ಕಾಲು ಮುಟ್ಟಿದ್ದಾರೆ.

ಕೇರಳದ ಪಾಲ್ಘಾಟ್‍ ನಿವಾಸಿ 21 ವರ್ಷದ ಪ್ರಣವ್‍ ಗೆ ಎರಡೂ ಕೈಗಳಿಲ್ಲ. ಆದರೂ ಚಿತ್ರಕಲೆ ಸೇರಿ ಹಲವು ಕಲೆಗಳಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಪ್ರಣವ್‍ ಅವರು ರಜನಿಕಾಂತ್‍ ಅವರ ದೊಡ್ಡ ಅಭಿಮಾನಿಯಂತೆ. ಈ ವಿಷಯ ತಿಳಿದ ರಜನಿಕಾಂತ್‍ ಅವರು ಪ್ರಣವ್‍ ಹಾಗೂ ಅವರ ಕುಟುಂಬಕ್ಕೆ ಟಿಕೆಟ್‍ ಬುಕ್‍ ಮಾಡಿಸಿ ಚೆನ್ನೈಗೆ ಕರೆಸಿಕೊಂಡಿದ್ದರು. ಪೋಯಿಸ್‍ ಗಾರ್ಡನ್‍ ನಲ್ಲಿರುವ ನಿವಾಸದಲ್ಲಿ ಭೇಟಿಯಾದ ಪ್ರಣವ್‍, ರಜನಿಕಾಂತ್‍ ಅವರಿಗೆ ಅವರದೇ ಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಈ ವೇಳೆ ರಜನಿಕಾಂತ್‍ ಅವರು ಪ್ರಣವ್‍ ಅವರ ಕಾಲಿನ ಸ್ಪರ್ಶ ಮಾಡಿದರು.

ರಜನಿಕಾಂತ್‌ ಅವರು ತಮ್ಮ ಅಭಿಮಾನಿಯ ಪಾದ ಸ್ಪರ್ಶಿಸಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಆ ಮೂಲಕ ರಜನಿ ಅವರ ಸರಳತೆ ಜಗತ್ತಿನ ಮುಂದೆ ಮತ್ತೊಮ್ಮೆ ಸಾಬೀತಾಗಿದೆ.

ಕೆಲ ದಿನಗಳ ಹಿಂದೆ ಕೇರಳ ಸಿಎಂ ಪಿಣರಾಯಿ ವಿಜಯನ್‍ ಅವರನ್ನು ಭೇಟಿ ಮಾಡಿದ್ದ ಪ್ರಣವ್‍, ನೆರೆ ಪರಿಹಾರ ನಿಧಿಗೆ ಚೆಕ್‍ ನೀಡಿದ್ದರು. ಈ ವೇಳೆ ಸಿಎಂ ಪಿಣರಾಯಿ ವಿಜಯನ್‍ ಕೂಡಾ ಪ್ರಣವ್‍ ಅವರ ಪಾದ ಸ್ಪರ್ಶ ಮಾಡಿದ್ದರು.

Scroll to Top