2ನೇ ಅವಧಿಯ ಎನ್​ಡಿಎ ಸರ್ಕಾರದಲ್ಲಿ ರಾಜ್ಯದ ಯಾರಿಗೆಲ್ಲಾ ಮಂತ್ರಿ ಸ್ಥಾನ..? ಇಲ್ಲಿದೆ ಮಾಹಿತಿ..!

ಬೆಂಗಳೂರು: ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್​ಡಿಎ ಸರ್ಕಾರದಲ್ಲಿ ರಾಜ್ಯದ ಮೂವರು ಸಂಸದರಿಗೆ ಸಚಿವ ಸ್ಥಾನ ದೊರೆತಿದೆ.

ಬೆಂ.ಉತ್ತರ ಸಂಸದ ಡಿ.ವಿ.ಸದಾನಂದಗೌಡ, ಬೆಳಗಾವಿ ಸಂಸದ ಸುರೇಶ್​​ ಅಂಗಡಿ ಹಾಗೂ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಮೋದಿ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇನ್ನು ಕಳೆದ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿ ಕೂಡ ರಾಜ್ಯದಿಂದಲೇ ಮಂತ್ರಿ ಸ್ಥಾನ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಇಂದು ಸಂಜೆ 5 ಗಂಟೆಗೆ ಮೋದಿ ಭೇಟಿಯಾಗಲಿರುವ ಮೂವರು ಸಂಜೆ 7 ಗಂಟೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸುರೇಶ್​​ ಅಂಗಡಿ ಹಾಗೂ ಸಂಸದ ಪ್ರಹ್ಲಾದ್ ಜೋಶಿ ಅವರು ಸತತ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದು, ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಡಿ.ವಿ.ಸದಾನಂದಗೌಡ ಅವರು ಎರಡನೇ ಬಾರಿಗೆ ಸಚಿವರಾಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ. ಕಳೆದ ಸರ್ಕಾರದಲ್ಲಿ ರೈಲ್ವೆ, ಕಾನೂನು ಮತ್ತು ಅಂಕಿಅಂಶ ಹಾಗೂ ಯೋಜನಾ ಜಾರಿ ಖಾತೆಗಳನ್ನು ನಿರ್ವಹಿಸಿದ್ದಾರೆ.

Scroll to Top