
ಧರ್ಮಸ್ಥಳ: ಬರದಿಂದ ಕಂಗೆಟ್ಟಿದ್ದ ಕರಾವಳಿಯಲ್ಲಿ ಭಾಗಗಳಲ್ಲಿ ವಾಯು ಚಂಡಮಾರುತದ ಪರಿಣಾಮವಾಗಿ ಮಳೆಯ ಅಬ್ಬರ ಜೋರಾಗಿದ್ದು, ಬತ್ತಿ ಹೋಗಿದ್ದ ನೇತ್ರಾವತಿಗೆ ನೀರು ಬಂದಿದೆ.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೇತ್ರಾವತಿ ನದಿಯಲ್ಲಿ ನೀರಿಲ್ಲ. ಮುಂದಿನ 15 ದಿನಗಳಲ್ಲಿ ಮಳೆ ಬರದಿದ್ದರೆ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೂ ನೀರಿರುವುದಿಲ್ಲ ಎಂದಿದ್ದ ಧರ್ಮಸ್ಥಳದಲ್ಲೀಗ ನೇತ್ರಾವತಿ ಒಡಲು ತುಂಬಿ ಹರಿಯುತ್ತಿದ್ದು, ಸಮಸ್ಯೆ ಬಗೆಹರಿದಿದೆ.

ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸ್ನಾನಘಟ್ಟದಲ್ಲಿ ನೀರು ಹರಿಯುತ್ತಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.

ನೇತ್ರಾವತಿಯಲ್ಲಿ ನೀರು ಬತ್ತಿದ್ದರಿಂದಾಗಿ ಧರ್ಮಸ್ಥಳದಲ್ಲಿ ಹಾಹಾಕಾರ ಉಂಟಾಗಿತ್ತು. ಕುಡಿಯುವ ನೀರಿಗೂ ಸಮಸ್ಯೆ ಎದುರಿಸುವಂತಾಗಿದ್ದ ವೇಳೆ ಭಕ್ತರು ಮತ್ತು ಪ್ರವಾಸಿಗರು ಈ ವೇಳೆಯಲ್ಲಿ ಧರ್ಮಸ್ಥಳಕ್ಕೆ ಬರುವುದನ್ನು ಮುಂದೂಡಿ ಎಂದು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದರು.
You must be logged in to post a comment.