ಮಾಸ್ಕ್‌ ಹಾಕೊಳ್ಳಿ ಎಂದಿದ್ದಕ್ಕೆ ಆಶಾ ಕಾರ್ಯಕರ್ತೆಗೆ ಧಮ್ಕಿ: ಇಬ್ಬರ ಬಂಧನ

ಮೈಸೂರು: ಕೊರೋನಾ ಜಾಗೃತಿ ಕುರಿತು ಮನೆಮನೆಗೆ ಸರ್ವೆಗೆ ತೆರಳಿದ ವೇಳೆ ಮಾಸ್ಕ್ ಹಾಕಿಕೊಳ್ಳುವಂತೆ ಹೇಳಿದ ಆಶಾಕಾರ್ಯಕರ್ತೆಗೆ ಧಮ್ಕಿ ಹಾಕಲಾಗಿದೆ.

ನಗರದ ಬನ್ನಿಮಂಟಪದ ಅಲೀಂ ನಗರದಲ್ಲಿ ಘಟನೆ ನಡೆದಿದ್ದು ಬನ್ನಿಮಂಟಪ ಸರ್ಕಾರಿ ಆಸ್ಪತ್ರೆಯ ಆಶಾ ಕಾರ್ಯಕರ್ತೆ ಸುಮಯಾ ಪಿರ್ದೋಸ್’ಗೆ ಬೆದರಿಕೆ ಹಾಕಲಾಗಿದೆ. ಕೊರೊನಾ ಲಕ್ಷಣಗಳ ಬಗ್ಗೆ ಸರ್ವೆ ಮಾಡುವ ವೇಳೆ ಮೂವರು ಪುಂಡರು ಧಮ್ಕಿ ಹಾಕಿದ್ದಾರೆ.

ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದಿಕೊಳ್ಳಿ ಎಂದಿದ್ದಕ್ಕೆ ಮೆಹಬೂಬ್, ಖಲೀಲಾ, ಜೀಸನ್ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಆಶಾ ಕಾರ್ಯಕರ್ತೆ ಎನ್ ಆರ್ ಠಾಣೆಗೆ ದೂರು ನೀಡಿದ್ದಾರೆ.

ಎಫ್‌ಐಆರ್ ದಾಖಲು:

ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದು ಧಮ್ಕಿ ಹಾಕಿದ ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸುತ್ತೇವೆ. ಕೊರೋನಾ ವಾರಿಯರ್ಸ್ ವಿರುದ್ಧ ಹೋರಾಡೋರಿಗೆ ತೊಂದರೆ ಕೊಟ್ಟರೆ ಕೇಸು ಗ್ಯಾರಂಟಿ. ಉತ್ತರ ಪ್ರದೇಶ ಹಾಗೂ ಕೇರಳದ ಮಾದರಿಯ ಕಾನೂನು ಜಾರಿ ಮಾಡುವ ಚಿಂತನೆ ಮಾಡಿದ್ದೇವೆ. ಇಂದು ಸಂಜೆಯೊಳಗೆ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದರು.

ಇಬ್ಬರ ಬಂಧನ:

ಇನ್ನು ಆಶಾ ಕಾರ್ಯಕರ್ತೆಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಜಲೀಲ್, ಜೀಸನ್ ಬಂಧಿಸಲಾಗಿದ್ದು. ಮತ್ತೊಬ್ಬ ಆರೋಪಿಗೆ ಶೋಧ ನಡೆಸಲಾಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.

Scroll to Top