ರಂಗನತಿಟ್ಟಿನಲ್ಲಿ ಪಕ್ಷಿ ಗಣತಿ: 60 ತಳಿಯ ಸಾವಿರಾರು ಪಕ್ಷಿ ಪತ್ತೆ

ಮೈಸೂರು: ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಅರಣ್ಯ ಇಲಾಖೆ ನೇತೃತ್ವದಲ್ಲಿ ಭಾನುವಾರ ಈ ವರ್ಷದ ಮೊದಲ ಪಕ್ಷಿ ಗಣತಿ ಕಾರ‍್ಯ ನಡೆಯಿತು.

ಗಣತಿಯಲ್ಲಿ 10 ಮಂದಿ ಪಕ್ಷಿ ತಜ್ಞರು ಹಾಗೂ 20 ನುರಿತ ಸಿಬ್ಬಂದಿ ಭಾಗವಹಿಸಿದ್ದರು. ಬೆಳಗ್ಗೆ 7ರಿಂದ 10ರವರೆಗೆ ಪಕ್ಷಿ ಗಣತಿ ನಡೆಯಿತು. ಕಳೆದ ವರ್ಷದಿಂದ ನಡೆಸಿದ್ದ ನಾಲ್ಕು ಗಣತಿ ಕಾರ‍್ಯದಲ್ಲಿ ಬೇರೆ ಬೇರೆ ಪ್ರಬೇಧಗಳಿಗೆ ಸೇರಿದ 110 ಪಕ್ಷಿಗಳನ್ನು ಗುರುತಿಸಲಾಗಿತ್ತು. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಂಗನತಿಟ್ಟು ಗುರುತಿಸಿಕೊಳ್ಳಲು ಈ ಗಣತಿ ಕಾರ‍್ಯ ಹಾಗೂ ಸಂಗ್ರಹವಾಗುವ ಮಾಹಿತಿ ತುಂಬಾ ಮುಖ್ಯವಾಗಿತ್ತು. 60 ಬಗೆಯ ಪಕ್ಷಿಗಳನ್ನು ಗಣತಿ ಕಾರ‍್ಯದಲ್ಲಿ ಪತ್ತೆ ಹಚ್ಚಲಾಯಿತು.

ಹೆಜ್ರ್ಜಾಲೆ ಕತ್ತಲು ಗುಬ್ಬಿ, ಕರಿ ಕೆಂಬರಲು, ದೊಡ್ಡ ಬೆಳ್ಳಕ್ಕಿ, ಬಣ್ಣದ ಕೊಕ್ಕರೆ, ಕಲ್ಲುಗೊರವ, ಬುಲ್‌ಬುಲ್‌, ಬೂದುಮಂಗಟ್ಟೆ ಹಕ್ಕಿ, ಹಳದಿ ಹೂ ಗುಬ್ಬಿ, ನೀರು ಕಾಗೆ, ಹೆಮ್ಮಿಂಚುಳ್ಳಿ, ಗುಲಾಬಿ ಕೊರಳಿನ ಗಿಳಿ, ಮಡಿವಾಳ ಹಕ್ಕಿ,ಗೋವಕ್ಕಿ, ಟುವ್ವಿ ಹಕ್ಕಿ, ಬಿಳಿ ಗರುಡ, ಹಾವು ಗಿಡುಗ, ಗಿಜಗ, ತೇನೆಹಕ್ಕಿ ಬೂದಬಕ, ಕೆನ್ನೀಳಿ ಬಕ, ಚಮಚದ ಕೊಕ್ಕು, ಕಾಡು ಕಾಗೆ, ನವಿಲು, ಕವಲುತೋಕೆ ಸೇರಿದಂತೆ 60 ಪಕ್ಷಿಗಳನ್ನು ಪಕ್ಷಿ ತಜ್ಞರು ಪತ್ತೆ ಹಚ್ಚಿಸಿದರು. ಪ್ರವಾಸಿಗರು ಓಡಾಡುವ ಸ್ಥಳ ಹಾಗೂ ಬೋಟಿಂಗ್‌ ಸ್ಥಳದಲ್ಲಿ ಗಣತಿ ನಡೆಸಲಾಯಿತು. ಆದರೂ ಬೆಳಗ್ಗೆ 8.30ರಿಂದಲೇ ಪ್ರವಾಸಿಗರಿಗೆ ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿತ್ತು.

”ಪಕ್ಷಿಗಳ ಸಮೂಹಗಳ ವ್ಯಾಪ್ತಿ ಹಾಗೂ ಪಕ್ಷಿ ಪ್ರಬೇಧಗಳ ವೈವಿಧ್ಯತೆ ಅರಿಯಲು ಈ ಗಣತಿ ನೆರವಿಗೆ ಬಂತು. ರಾಮ್‌ಸನ್‌ ಕನ್ವೆನ್ಷನ್‌ ವೆಟ್‌ ಲ್ಯಾಂಡ್‌ ಎಂದು ರಂಗನತಿಟ್ಟನ್ನು ಘೋಷಣೆ ಮಾಡಲು ಈ ರೀತಿಯ ಗಣತಿ ಅಗತ್ಯವಾಗಿ ಬೇಕಿದೆ. ಹಾಗೇನಾದರೂ ವೆಟ್‌ ಲ್ಯಾಂಡ್‌ ಎಂದು ಘೋಷಣೆಯಾದರೆ ರಂಗನತಿಟ್ಟು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ. ಗಣತಿ ಕಾರ‍್ಯದಲ್ಲಿ 60 ಬಗೆಯ ಪಕ್ಷಿಗಳನ್ನು ಪತ್ತೆ ಹಚ್ಚಲಾಯಿತು. ಮಾಹಿತಿ ಸಂಗ್ರಹಕ್ಕೆ ಈ ರೀತಿಯ ಗಣತಿ ಕಾರ‍್ಯ ಕಾಲಕಾಲಕ್ಕೆ ಆಗಬೇಕಿದೆ,” ಎಂದು ಡಿಸಿಎಫ್‌ ಡಾ.ಕೆ.ಸಿ.ಪ್ರಶಾಂತ್‌ ಕುಮಾರ್‌ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.

7 ತಂಡಗಳ ರಚನೆ: ಗಣತಿ ಕಾರ‍್ಯದಲ್ಲಿ ತಲಾ ಮೂರು ಸದಸ್ಯರು ಇರುವ 7 ತಂಡಗಳನ್ನು ರಚಿಸಲಾಗಿತ್ತು. ಬೋಟ್‌ಗಳಲ್ಲಿ ಇವರೆಲ್ಲರನ್ನು ಕರೆದುಕೊಂಡು ಹೋಗಲಾಗಿತ್ತು. ರಂಗನತಿಟ್ಟು ಪಕ್ಷಿಧಾಮದಲ್ಲಿ ಒಟ್ಟು 28 ದ್ವೀಪಗಳಿವೆ. ಹಾಗಾಗಿ ಪ್ರತಿ ತಂಡವೂ ಇಂತಿಷ್ಟು ದ್ವೀಪಗಳಿಗೆ ತೆರಳಿ ಗಣತಿ ಕಾರ‍್ಯ ನಡೆಸಿತು. ಡಿಸಿಎಫ್‌ ಡಾ.ಕೆ.ಸಿ.ಪ್ರಶಾಂತ್‌ಕುಮಾರ್‌, ಆರ್‌ಎಫ್‌ಒ ಅನನ್ಯ ಕುಮಾರ್‌, ಡಿಆರ್‌ಎಫ್‌ಒ ಎಂ.ಪುಟ್ಟಮಾದೇಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.

Scroll to Top