ಮೈಸೂರು: ಹೊಸ ವರ್ಷದ ಆಗಮನ ಜನರಿಗೆ ಅಕ್ಷರಶಃ ನಡುಕ ಹುಟ್ಟಿಸಿದೆ. ಏಕೆಂದರೆ ಹೊಸ ವರ್ಷದ ಆಗಮನದ ಜೊತೆಗೆ ವಿಪರೀತ ಚಳಿಯೂ ಆಗಮನವಾಗಿದೆ. ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ಈಗ ಚಳಿಯೋ ಚಳಿ. ಉತ್ತರ ಭಾರತದಿಂದ ದಕ್ಷಿಣದ ಕಡೆಗೆ ಶೀತಗಾಳಿ ಬೀಸುತ್ತಿರುವುದರಿಂದ ರಾಜ್ಯದಲ್ಲೂ ಈಗ ಭಯಂಕರ ಚಳಿ ಆರಂಭವಾಗಿದೆ.

ಉತ್ತರದಿಂದ ದಕ್ಷಿಣಕ್ಕೆ ವಿಪರೀತ ಶೀತಗಾಳಿ ಬೀಸುತ್ತಿರುವುದು ಚಳಿಗೆ ಪ್ರಮುಖ ಕಾರಣ. ಹಾಗಾಗಿ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನ ದಾಖಲಾಗಿದೆ. ಮೈಸೂರಿನಲ್ಲಿ 11 ರಿಂದ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಅಲ್ಲದೆ ಶನಿವಾರ ಬೆಳಗ್ಗೆ 10.2 ಡಿಗ್ರಿ ಸೆಲ್ಸಿಯಸ್ನಷ್ಟು ಕನಿಷ್ಠ ತಾಪಮಾನ ದಾಖಲಾಗಿತ್ತು.
ತಿಂಗಳ ಹಿಂದೆಯೇ ಚಳಿಗಾಲ ಆರಂಭಗೊಂಡಿದ್ದರೂ ಅತಿ ಕಡಿಮೆ ತಾಪಮಾನ ದಾಖಲಾಗಿರುವುದು ಈ ಅವಧಿಯಲ್ಲಿ. ಕರ್ನಾಟಕ ರಾಜ್ಯ ವಿಕೋಪ ನಿರ್ವಹಣಾ ಕೇಂದ್ರದಲ್ಲಿ ದಾಖಲಾಗಿರುವ ತಾಪಮಾನ ಇದನ್ನು ಖಚಿತಪಡಿಸಿದೆ. ಕೆಲ ವರ್ಷ ಗಳ ಹಿಂದೆ 8.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿರುವುದು ಮೈಸೂರಿನ ಅತಿ ಕಡಿಮೆ ತಾಪಮಾನ.
ಇನ್ನು ಕೆಲ ದಿನಗಳಿಂದ ರಾಜ್ಯಾದ್ಯಂತ ಶೀತಗಾಳಿ ಮಿಶ್ರಿತ ವಾತವಾರಣ ಇದ್ದು, ಜನವರಿ 10ರವರೆಗೂ ಮೈಕೊರೆಯುವ ಚಳಿ ಮುಂದುವರಿಯಲಿದೆ. ಚಳಿಯ ತೀವ್ರತೆ ಇನ್ನೂ ಹೆಚ್ಚಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಮಂಡಳಿ ಮಾಹಿತಿ ನೀಡಿದೆ.
ರಾಜ್ಯದ ವಿವಿಧ ಭಾಗಗಳಲ್ಲಿನ ತಾಪಮಾನ:
- ಆಗುಂಬೆ – 15 ಡಿಗ್ರಿ ಸೆಲ್ಸಿಯಸ್
- ಬೀದರ್ – 13 ಡಿಗ್ರಿ ಸೆಲ್ಸಿಯಸ್
- ಧಾರವಾಡ – 14 ಡಿಗ್ರಿ ಸೆಲ್ಸಿಯಸ್
- ವಿಜಯಪುರ – 15 ಡಿಗ್ರಿ ಸೆಲ್ಸಿಯಸ್
- ಹಾವೇರಿ – 14 ಡಿಗ್ರಿ ಸೆಲ್ಸಿಯಸ್
- ಬೆಳಗಾವಿ – 14 ಡಿಗ್ರಿ ಸೆಲ್ಸಿಯಸ್
- ಶಿವಮೊಗ್ಗ – 14 ಡಿಗ್ರಿ ಸೆಲ್ಸಿಯಸ್
- ಹಾಸನ – 12 ಡಿಗ್ರಿ ಸೆಲ್ಸಿಯಸ್
- ಮೈಸೂರು – 13 ಡಿಗ್ರಿ ಸೆಲ್ಸಿಯಸ್
- ಬೆಂಗಳೂರು – 11 ಡಿಗ್ರಿ ಸೆಲ್ಸಿಯಸ್