
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ, ಪ್ರವಾಹದಿಂದ ಅಪಾರ ಹಾನಿಯುಂಟಾದ ಕಾರಣ ಈ ಬಾರಿ ದಸರಾವನ್ನು ಸರಳ ದಸರವನ್ನಾಗಿ ಆಚರಿಸಿವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಹಿನ್ನೆಲೆ ವಿಜೃಂಬಣೆಯ ದಸರಾ ಆಚರಣೆ ಬೇಡ. ಆದರೆ ದಸರಾದಲ್ಲಿ ವಸ್ತುಪ್ರದರ್ಶನ ಎಂದಿನಂತೆ ನಡೆಯಲಿವೆ. ಕಲಾವಿದರಿಗೆ ಯಾವುದೇ ತೊಂದರೆ ಇಲ್ಲ. ವಿದೇಶಿಯರಿಗೆ ವ್ಯವಸ್ಥೆಯಲ್ಲಿ ಲೋಪವಾಗಬಾರದು ಎಂದು ತಿಳಿಸಿದ್ದಾರೆ.
ಹಾಗೆಯೇ ಸಾಂಪ್ರದಾಯಕ ದಸರಾ ಆಚರಣೆಗೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. 20.5 ಕೋಟಿ ಹಣವನ್ನು ದಸರೆಗೆ ಬಿಡುಗಡೆ ಮಾಡಲಾಗಿದೆ. ಪ್ರತಿವರ್ಷ ಹೇಗೆ ದಸರಾ ಆಚರಣೆಯಾಗುತ್ತದೋ ಅದೇ ರೀತಿ ಯಾವುದೇ ಕೊರತೆಯಾಗದಂತೆ ಈ ಬಾರಿಯೂ ಆಚರಿಸಲಾಗುತ್ತದೆ. ರಾಜ್ಯದ ಪ್ರತಿಭಾವಂತ ಕಲಾವಿದರನ್ನು ಆರಿಸಿಯೇ ಈ ಬಾರಿ ದಸರೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಲು ಮುಂದಾಗುವಂತೆ ಇಲಾಖೆಗಳಿಗೆ ತಿಳಿಸಲಾಗಿದೆ” ಎಂದರು.
ಇನ್ನು ಈ ಬಾರಿ ದಸರಾ ಮಹೋತ್ಸವ ಉದ್ಘಾಟನೆಗೆ ಪ್ರಸಿದ್ಧ ಸಾಹಿತಿ ಎಸ್.ಎಲ್.ಭೈರಪ್ಪ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು, ಮೈಸೂರು ಸಂಸದರು, ಶಾಸಕರು ಭಾಗಿಯಾಗಿದ್ದರು. ಉತ್ಸವದ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚೆ ನಡೆಸಲಾಯಿತು.
ಸೆಪ್ಟಂಬರ್ 28ರಿಂದ ದಸರಾ ಮಹೋತ್ಸವ ಆರಂಭವಾಗಲಿದೆ.