ಮೈಸೂರಿನಲ್ಲಿ ಆರಂಭವಾಗಲಿದೆ ರಾಜ್ಯದ ಮೊದಲ ಕನ್ನಡ ಮಾಧ್ಯಮ ವಿಜ್ಞಾನ ಕಾಲೇಜು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜ್ಯದಲ್ಲಿ ಮೊದಲ ಕನ್ನಡ ಮಾಧ್ಯಮದಲ್ಲಿ ವಿಜ್ಞಾನವನ್ನು ಬೋಧಿಸುವ ಏಕೈಕ ಪದವಿಪೂರ್ವ ಕಾಲೇಜು ಈ ಶೈಕ್ಷಣಿಕ ವರ್ಷದಿಂದ ಆರಂಭವಾಗುತ್ತಿದೆ.

ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯು ರಾಜ್ಯದಲ್ಲೇ ಕನ್ನಡ ಮಾಧ್ಯಮದಲ್ಲಿ ವಿಜ್ಞಾನವನ್ನು ಬೋಧಿಸುವ ಏಕೈಕ ಪದವಿಪೂರ್ವ ಕಾಲೇಜನ್ನು ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸುತ್ತಿದೆ. ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ, ಜೀವವಿಜ್ಞಾನ ಮತ್ತು ಗಣಕವಿಜ್ಞಾನ ವಿಷಯವನ್ನು ಕನ್ನಡದಲ್ಲೇ ವಿದ್ಯಾರ್ಥಿಗಳು ಕಲಿಯಬಹುದಾಗಿದೆ.

”ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜು ಮೇ 19ರಂದು ಉದ್ಘಾಟನೆಯಾಗಲಿದೆ. ಉತ್ತಮ ಮೂಲಭೂತ ಸೌಕರ‍್ಯ, ಪರಿಣಿತ ಬೋಧಕರ ತಂಡ, ಸುಸಜ್ಜಿತ ಪ್ರಯೋಗಾಲಯಗಳು, ಜ್ಞಾನಸಿರಿ ಗ್ರಂಥಾಲಯ ಈ ಕಾಲೇಜಿನ ವೈಶಿಷ್ಟ್ಯ,”

”ಮೇ 19ರಂದು ಬೆಳಗ್ಗೆ 11ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಕಾಲೇಜಿನ ತರಗತಿಗಳ ಆರಂಭಕ್ಕೆ ಚಾಲನೆ ನೀಡಲಿದ್ದಾರೆ. ಸಚಿವ ಟಿ.ಎಸ್‌.ಜಾರ್ಜ್‌, ಸಿ. ಶಿಖಾ ಕಾರ್ಯಕ್ರಮದಲ್ಲಿ ಭಾಗವಹಿಸುವರು”.

2 ಕೋಟಿ ಅನುದಾನ:

”ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸರಕಾರದ ಅವಧಿಯಲ್ಲಿ ಇದಕ್ಕಾಗಿ 2 ಕೋಟಿ ಅನುದಾನ ನೀಡಲು ಒಪ್ಪಿ 1 ಕೋಟಿ ಬಿಡುಗಡೆ ಮಾಡಿದ್ದರು. ಇದರಲ್ಲಿ 1 ಕೋಟಿ ಹಣದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಹಾಲಿ ಸಚಿವ ಕೆ.ಜೆ.ಜಾರ್ಜ್‌ ಅವರು 25 ಲಕ್ಷ ರೂ. ಅನುದಾನ ನೀಡಿದ್ದರು. ಅದರಲ್ಲಿ ಸುಸಜ್ಜಿತ 40 ಮಂದಿ ಕೂರುವ ಕಂಪ್ಯೂಟರ್‌ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಪ್ರಾಂಶುಪಾಲ ಕೊಠಡಿ, ಅಧ್ಯಾಪಕರ ಕೊಠಡಿ, ವಿಜ್ಞಾನ ಪ್ರಯೋಗಾಲಯ ಸೇರಿದಂತೆ ತರಗತಿ ನಡೆಸಲು 4 ಕೊಠಡಿಗಳ ಲಭ್ಯವಿರುವ ಭವ್ಯ ಕಟ್ಟಡ ನಿರ್ಮಿಸಲಾಗಿದೆ. ಇದುವರೆಗೆ ಎಸ್ಸೆಸ್ಸೆಲ್ಸಿ ಪಾಸಾದ 600 ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದು, ಸದ್ಯ 5 ವಿದ್ಯಾರ್ಥಿಗಳು ಪ್ರವೇಶಾತಿಗೆ ಅರ್ಜಿ ಸಲ್ಲಿಸಿದ್ದಾರೆ”.

ಕನ್ನಡದಲ್ಲೇ ಪಠ್ಯ:

”ಪ್ರಥಮ ವರ್ಷದ ಪಠ್ಯಪುಸ್ತಕಗಳನ್ನು ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಕನ್ನಡದಲ್ಲೇ ಸಿದ್ಧಪಡಿಸಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಕಂಪ್ಯೂಟರ್‌ ಪಠ್ಯಪುಸ್ತಕ ಸಂಸ್ಥೆ ವತಿಯಿಂದಲೇ ಗಣಕ ತಜ್ಞರಿಂದ ಅನುವಾದಿಸಲಾಗಿದೆ. ವಿಜ್ಞಾನವನ್ನು ಕನ್ನಡದಲ್ಲಿ ಕಲಿಸುವ ಕಾಲೇಜು ನಿರ್ಮಾಣ ಮಾಡಬೇಕೆಂಬುದು ಬಹು ದಿನದ ಕನಸಾಗಿತ್ತು. ಇದು ರಾಜ್ಯಕ್ಕೆ ಮೊದಲ ಕಾಲೇಜು, ಈ ರೀತಿಯ ವ್ಯವಸ್ಥೆ ರಾಜ್ಯದ ಯಾವುದೇ ಸರಕಾರಿ, ಖಾಸಗಿ ಕಾಲೇಜುಗಳಲಿಲ್ಲ. ಕನ್ನಡದಲ್ಲೇ ವಿಷಯ ಬೋಧಿಸಲು 30 ವರ್ಷ ಬೋಧನಾ ವೃತ್ತಿ ಸಲ್ಲಿಸಿ ನಿವೃತ್ತರಾಗಿರುವ ಪರಿಣಿತ ಅಧ್ಯಾಪಕರನ್ನು ನೇಮಿಸಿಕೊಳ್ಳಲಾಗಿದೆ”.

10 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ. ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ಮತ್ತು ವಾಣಿಜ್ಯ ವಿಷಯ ಆಯ್ಕೆ ಮಾಡಿಕೊಳ್ಳುವವರಿಗೆ 8 ಸಾವಿರ ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ 10 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿಎಸ್‌ ಐಚ್ಛಿಕ ವಿಷಯಗಳನ್ನು ಓದಬಹುದು.

Scroll to Top