
ಮೈಸೂರು: ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆಗಿದ್ದರೂ ಜಿಲ್ಲಾಡಳಿತದ ಆದೇಶಕ್ಕೂ ಜನರು ಕ್ಯಾರೆ ಎನ್ನುತ್ತಿಲ್ಲ. ಈ ನಿಟ್ಟಿನಲ್ಲಿ ಮೈಸೂರು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಸುಮ್ಮ ಸುಮ್ಮನೇ ಹೋಡಾಡುತ್ತಿದ್ದ ಹತ್ತಕ್ಕೂ ಹೆಚ್ಚು ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಎಂ ಜಿ ರಸ್ತೆಯಲ್ಲಿ ಈ ಆಟೋಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ನ ಎಂ ಜಿ ರಸ್ತೆಯಲ್ಲಿ ಗಿಜಿ ಗಿಜಿ ಮುಂದುವರಿದಿದ್ದು, ನಿನ್ನೆ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಅವರು ಮಾರುಕಟ್ಟೆಯನ್ನು ದಸರಾ ವಸ್ತು ಪ್ರದರ್ಶನ ಮೈದಾನಕ್ಕೆ ಸ್ಥಳಾಂತರಕ್ಕೆ ಆದೇಶಿಸಿದ್ದರು. ಆದೇಶ ಪಾಲಿಸದೆ ಅದೇ ಸ್ಥಳದಲ್ಲೇ ವ್ಯಾಪಾರಸ್ಥರು, ರೈತರು ವ್ಯಾಪಾರ ಮುಂದುವರಿಸಿದ್ದಾರೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಯ ಬಳಿ ಸೇರಿದ್ದರಿಂದ ಅವರನ್ನು ಕರೆದೊಯ್ಯಲು ಆಟೋಗಳು ಬರುತಿದ್ದವು. ಈಗಾಗಿ ಹತ್ತು ಆಟೋಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಸರಾ ವಸ್ತು ಪ್ರದರ್ಶನ ಮೈದಾನವನ್ನು ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮತಟ್ಟುಗೊಳಿಸಲಾಗುತ್ತಿದೆ. ಮೈಸೂರಿನ ಜನತೆ ಕೊರೋನಾ ಸೋಂಕಿನ ಕುರಿತು ಜಾಗೃತೆ ವಹಿಸಿದಂತೆ ಕಾಣುತ್ತಿಲ್ಲ. ಜಿಲ್ಲಾಡಳಿತ , ಪೊಲೀಸರು ಎಷ್ಟು ಹೇಳಿದರೂ ಕೇಳದೆ ಬೀದಿಗಿಳಿಯುತ್ತಿರುವುದು ಕಂಡು ಬರುತ್ತಿದೆ. ಜನದಟ್ಟಣೆಯನ್ನು ತಡೆಯಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.