ಗುಡಿಸಲಲ್ಲಿ ವಾಸ ಮಾಡುವ ಸನ್ಯಾಸಿ ಈಗ ಕೇಂದ್ರ ಸಚಿವ

ನವದೆಹಲಿ: ಒಡಿಶಾದಿಂದ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆ ಯಾದ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರು ಮೋದಿ ಸರ್ಕಾರ ದಲ್ಲಿ ಮಂತ್ರಿಯಾಗಿದ್ದಾರೆ. ತನ್ನ ಸರಳ ಜೀವನ ಶೈಲಿಯಿಂದಲೇ ಮನೆಮಾತಾದ ಪ್ರತಾಪ್‌ ಚಂದ್ರ ಸಾರಂಗಿ ಮೋದಿ ಸಚಿವ ಸಂಪುಟದಲ್ಲಿ ಸಹಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ವಿಶೇಷವೆಂದರೆ ಇವರು ತಮ್ಮ ಸರಳ ಜೀವನದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಗುಡಿಸಲಿನಂತಹ ಸಣ್ಣ ಮನೆಯಲ್ಲಿ ವಾಸಿಸುವ ಇವರು ಸೈಕಲ್‌ನಲ್ಲಿ ಓಡಾಡುತ್ತಾರೆ. ಕೊಳವೆ ಬಾವಿಯ ನೀರಿನಲ್ಲೇ ಸ್ನಾನ ಮಾಡುತ್ತಾರೆ. ಸೈಕಲ್ ಮೂಲಕವೇ ಹಳ್ಳಿ ಹಳ್ಳಿಗೆ ಹೋಗಿ ಮತಯಾಚಿಸಿದ್ದರು. ತಮ್ಮ ಸರಳ ಜೀವನದಿಂದಲೇ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿರುವ ಅವರು ಒಡಿಶಾದ ಬಾಲಾಸೋರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಆಗಿದ್ದಾರೆ.

ಗುಡಿಸಲು ವಾಸಿ ಸನ್ಯಾಸಿ

64 ವರ್ಷದ ಇವರು ಒಡಿಶಾದ ‘ನರೇಂದ್ರ ಮೋದಿ’ ಎಂದೇ ಪ್ರಸಿದ್ಧರಾಗಿದ್ದಾರೆ. ಇವರು ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆಗೆ ಹೆಸರಾದವರು. ಇವರಿಗೆ ದೊಡ್ಡ ಮೊತ್ತದ ಆಸ್ತಿಯಿಲ್ಲ. ಬೃಹತ್‌ ಬಂಗಲೆಯಿಲ್ಲ. ನಿತ್ಯ ಸೈಕಲ್‌ನಲ್ಲಿಯೇ ಸಂಚಾರ. ಗುಡಿಸಲಿನಲ್ಲಿ ವಾಸ. ಅವಿವಾಹಿತ. 2004, 2009ರಲ್ಲಿ ನಿಲಗಿರಿ ಕ್ಷೇತ್ರದಿಂದ ಶಾಸಕರಾಗಿದ್ದರೂ ತಮಗಾಗಿ ಸ್ವಂತ ಸೂರನ್ನು ಕೂಡ ನಿರ್ಮಿಸಿಕೊಳ್ಳಲಿಲ್ಲ. ಗುಡಿಸಲಿನಲ್ಲಿ ವಾಸಮಾಡಿಕೊಂಡು, ಸೈಕಲ್‌ನಲ್ಲಿ ಸಂಚರಿಸುವ ಪ್ರತಾಪ್‌ ಸರಳತೆಗೆ ಜನಪ್ರಿಯರು.

ಚುನಾವಣೆ ವೇಳೆ ಸಾರಂಗಿ ಬಾಡಿಗೆಗೆ ಪಡೆದ ರಿಕ್ಷಾದಲ್ಲಿ ಸುತ್ತುತ್ತಾ ಮತ ಯಾಚಿಸುತ್ತಿದ್ದರು. ಇವರನ್ನು ಇಲ್ಲಿನ ಜನರು ನಾನಾ ಎಂದೇ ಕರೆಯುತ್ತಾರೆ.

Scroll to Top