ಕನ್ನಡ ಅಸ್ಮಿತೆಯನ್ನು ಜಾಗೃತಗೊಳಿಸಿದ ನಾಡಕವಿ ಹುಯಿಲಗೋಳ ನಾರಾಯಣರಾವ್’ರ ಜಯಂತಿ ಇಂದು

ಮೈಸೂರು: ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡಿನ ಮೂಲಕ ಕನ್ನಡ ಅಸ್ಮಿತೆಯನ್ನು ಜಾಗೃತಗೊಳಿಸಿದ ನಾಡಕವಿ, ಸ್ವಾತಂತ್ರ್ಯ ಹೋರಾಟಗಾರ ಶ್ರೀ ಹುಯಿಲಗೋಳ ನಾರಾಯಣರಾವ್ ಅವರ ಜಯಂತಿ ಇಂದು.

ನಾಡಕವಿ ಎಂದು ಹೆಸರಾದ ಹುಯಿಲಗೋಳ ನಾರಾಯಣ ರಾವ್ ಅವರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ನಾಡಗೀತೆ ಸ್ವತಂತ್ರ ಕಿಚ್ಚು ಹೊತ್ತಿಸುವ ಮೂಲಕ ಕರ್ನಾಟಕ ಏಕೀಕರಣಕ್ಕೆ ನಾಂದಿ ಹಾಡಿತು. ನಾಡು, ನುಡಿಗೆ ನಾರಾಯಣರಾವ್‌ರು ನೀಡಿದ ಕೊಡುಗೆ ಅಪಾರವಾಗಿದೆ.

1924ರಲ್ಲಿಯೇ ಸ್ವಾತಂತ್ರ್ಯ ಸಿಗದ ಸಂದಿಗ್ಧ ಸ್ಥಿತಿಯಲ್ಲಿ ನಾರಾಯಣರಾವ್ ಅವರು ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಕಾಂಗ್ರೆಸ್ ಸಭೈಯಲ್ಲಿ ತಮ್ಮ ಮೊದಲ ನಾಡಗೀತೆ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಪ್ರಕಟಿಸಿದ್ದರು.

ನಮ್ಮ ಕನ್ನಡನುಡಿ, ನದಿಗಳು, ಭಾಷೆ, ಕವಿ ಮಹೋದಯರು ಎಲ್ಲರನ್ನು ಒಳಗೊಂಡ ಗೀತೆಯಿದು

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು

ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು.

ರಾಜನ್ಯರಿಪು ಪರಶುರಾಮನಮ್ಮನ ನಾಡು

ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು

ಓಜೆಯಿಂ ಮೆರೆದರಸುಗಳ ಸಾಹಸದ ಸೂಡು

ತೇಜವನು ನಮಗೀವ ವೀರವೃಂದದ ಬೀಡು.

ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು

ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು

ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು

ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು.

ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು

ಕಾವೇರಿ ಗೋದೆಯರು ಮೈದೊಳೆವ ನಲುನಾಡು

ಆವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು

ಕಾವ ಗದುಗಿನ ವೀರನಾರಾಯಣನ ಬೀಡು.

– ಹುಯಿಲಗೋಳ ನಾರಾಯಣರಾವ್

Scroll to Top